
ತಮ್ಮ ಖಾತೆಯ ಟ್ವೀಟ್ನ ಮೂಲಕ ಆದರಣೀಯ ಪ್ರಧಾನಮಂತ್ರಿ ನರೇಂದ್ರಮೋದಿಯವರಿಗೆ ನೀವೊಂದಷ್ಟು ಪ್ರಶ್ನೆಗಳನ್ನು ಕೇಳಿರುವಿರಿ. ನಿಮ್ಮ ಪ್ರಶ್ನೆಗೆ ಉತ್ತರ ಕೊಡಲಾಗದೇ ಅವರು ಓಡಿಹೋಗುತ್ತಾರೆ ಎಂದೂ ಅದರಲ್ಲಿ ಬಿಂಬಿಸುವ ಪ್ರಯತ್ನ ಮಾಡಿದ್ದೀರಿ. ಮೋದಿಯವರ ಸಾಧನೆ ಕಣ್ಣೆದುರು ನಿಚ್ಚಳವಾಗಿರುವಾಗ ಅದನ್ನು ಕಾಣಲಾಗದ ನಮ್ಮ ಕುರುಡತನಕ್ಕೆ ಅನುಕಂಪವಿರಬೇಕೇ ಹೊರತು ಉತ್ತರಿಸದಿರುವ ಮೋದಿಯವರ ಕುರಿತಂತೆ ಅಲ್ಲ. ನೀವು ಕೇಳಿರುವ ಅತ್ಯಂತ ಬಾಲಿಶವಾದ ಪ್ರಶ್ನೆಗಳಿಗೆ ಸ್ವಲ್ಪಮಟ್ಟಿಗೆ ಪ್ರಜ್ಞೆಯಿರುವ ಯಾವನು ಬೇಕಾದರೂ ಉತ್ತರಿಸಬಲ್ಲ. ಮೋದಿ ಕಣ್ಣಿಗೆ ರಾಚುವಂತೆ ವಿಕಾಸದ ಹಬ್ಬ ನಡೆಸಿಬಿಟ್ಟಿದ್ದಾರೆ. ಅದರ ಫಲಾನುಭವಿ ನೀವೂ ಕೂಡ ಆಗಿದ್ದೀರಿ ಎನ್ನುವುದನ್ನು ಮರೆಯಬೇಡಿ.






ನಿಮ್ಮ ಮೊದಲ ಪ್ರಶ್ನೆ ಮುಂಬೈನಲ್ಲಿ ನಡೆದ ಇಂಡಿಯಾ ಮೈತ್ರಿ ಕೂಟದ ಮಹತ್ವದ ಮೂರನೆಯ ಸಭೆಯ ಕುರಿತಂತೆ ಇದೆ. ಅದರ ಬಗ್ಗೆ ಕೊಚ್ಚಿಕೊಳ್ಳುವುದು ನಿಮಗೇ ಬಿಟ್ಟಿದ್ದು. ಆದರೆ ವಾಸ್ತವ ಸಂಗತಿ ನಾಡಿನ ಮುಂದೆ ನಗ್ನವಾಗಿ ನಿಂತಿದೆ.
ಇಂಡಿ ಕೂಟಕ್ಕೆ
ಒಮ್ಮತದ ಪ್ರಧಾನಿ ಅಭ್ಯರ್ಥಿಯೇ ಇಲ್ಲ
ಒಮ್ಮತದ ಸೀಟು ಹಂಚಿಕೆ ಇಲ್ಲ,
‘ಆದಷ್ಟೂ ಒಮ್ಮತ’ ಎಂಬುದಷ್ಟೇ ಸಿಕ್ಕ ಸೀರುಂಡೆ
ಒಮ್ಮತದ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳಿಲ್ಲ
ಅಷ್ಟೂ ಜನಕ್ಕೂ ಚುನಾವಣೆಯಲ್ಲಿ ಕಾದಾಡಲು ಒಂದೇ ಗುರುತು ಇಲ್ಲ
ಕೊನೆಗೆ, ಒಮ್ಮತದ ಲೋಗೊ ರಚನೆ ಕೂಡ ಸಾಧ್ಯವಾಗಲಿಲ್ಲ.
ಹೀಗೆ ಪ್ರತೀ ಹಂತದಲ್ಲೂ ಮುಗ್ಗರಿಸಿ ಬೀಳುತ್ತಿರುವ ತಾವುಗಳು ಬಲವಾಗಿ ಬೇರೂರಿರುವ ಮೋದಿಯನ್ನು ಅಪಹಾಸ್ಯ ಮಾಡುವುದು ಅಚ್ಚರಿ ಎನಿಸುತ್ತದೆ. ಇಷ್ಟಕ್ಕೂ ಬಿಜೆಪಿಗೆ ನಡುಕ ಶುರುವಾಗಿದೆ ಎಂದು ನೀವು ಹೇಳುತ್ತಿದ್ದೀರಿ. ಒಬ್ಬ ವ್ಯಕ್ತಿಯನ್ನು ಉರುಳಿಸಲು ನಿಮ್ಮೊಳಗೇ ಕಿತ್ತಾಡುವ ನೀವೆಲ್ಲರೂ ಒಟ್ಟಾಗಿದ್ದೀರೆಂದರೆ ನಡುಕ ಯಾರಿಗೆ ಎಂದು ನಿಮಗೇ ಅರಿವಾಗುವುದಿಲ್ಲವೇ?
ರಾಹುಲ್ ಕ್ರಿಯಾತ್ಮಕ ಸಲಹೆ ನೀಡುತ್ತಾರೆ ಎಂದಿದ್ದೀರಿ. ರಾಹುಲ್ ಏನೆಂಬುದನ್ನು ಜನ ಮರೆತಿದ್ದಾರೆಂಬ ಭ್ರಮೆಯ ಕಾರಣಕ್ಕೆ ಹುಟ್ಟಿಕೊಂಡ ಕಲ್ಪನೆಯಿದು
ರಫೇಲ್ನಲ್ಲಿ ಮೋಸವಾಗಿದೆ ಎಂದು ಕಳೆದ ಚುನಾವಣೆಯುದ್ದಕ್ಕೂ ರಾಹುಲ್ ಹೇಳುತ್ತಾ ಬಂದಿದ್ದನ್ನು ಸುಪ್ರೀಂಕೋರ್ಟು ವಿಚಾರಣೆಗೆ ತೆಗೆದುಕೊಂಡು ಸುಳ್ಳೆಂದಿತಲ್ಲದೇ ಈ ಕುರಿತಂತೆ ಆತ ಕೋರ್ಟಿನ ವಿರುದ್ಧ ತಂಟೆ ಮಾಡಲು ಹೋಗಿ ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದು ಮರೆತಿದೆಯೇನು?
ಕೈಲಾಸ ಯಾತ್ರೆಯ ಹೊತ್ತಲ್ಲಿ ಚೀನಾದ ಮಂತ್ರಿಗಳನ್ನು ಭೇಟಿಮಾಡಿ ಉದ್ಯೋಗ ಸೃಷ್ಟಿಯ ಕುರಿತಂತೆ ಮಾತಾಡಿದ್ದೇನೆ ಎಂದು ಹೇಳಿದ ರಾಹುಲ್ನ ಮಾತು ಯಾರೂ ಮರೆತಿಲ್ಲ. ಶತ್ರು ರಾಷ್ಟ್ರವೊಂದರ ಮಂತ್ರಿಗಳೊಂದಿಗೆ ಕೈಲಾಸ ಯಾತ್ರೆಯಲ್ಲಿರುವ ರಾಹುಲ್ಗೇನು ಮಾತುಕತೆ? ಇಷ್ಟಕ್ಕೂ ಚೀನಾದ ಮಂತ್ರಿಗಳು ರಾಹುಲ್ನನ್ನು ಮಾತನಾಡಿಸಲು ಕೈಲಾಸದ ದಿಕ್ಕಿಗೆ ಬಂದಿದ್ದರೆಂದರೆ ಅದೆಂತಹ ಘನಿಷ್ಠ ಸಂಬಂಧ. ಪ್ಲೀಸ್ ಉತ್ತರಿಸಿ.
೨೦೦೫-೦೬ರಲ್ಲಿ ಸ್ವತಃ ಕಾಂಗ್ರೆಸ್ ಅಧಿಕಾರ ನಡೆಸುತ್ತಿದ್ದ ಹೊತ್ತಲ್ಲಿ ಪಕ್ಷವೇ ನಡೆಸುವ ರಾಜೀವ್ ಗಾಂಧೀ ಫೌಂಡೇಶನ್ಗೆ ಚೀನಾದ ರಾಯಭಾರಿ ಕಛೇರಿಯಿಂದ ೧.೩೫ ಕೋಟಿ ಹಣ ಬಂದಿತ್ತಲ್ಲ, ಅದೇಕೆ? ಈ ಫೌಂಡೇಶನ್ಗೆ ವಿದೇಶಿ ಹಣ ಸ್ವೀಕರಿಸಲು ಇದ್ದ ಅನುಮತಿ ಈ ಕಾರಣಕ್ಕೆ ನಿರಾಕರಿಸಲ್ಪಟ್ಟಿದೆಯಲ್ಲ. ಹೋಗಲಿ, ೨೦೦೮ರಲ್ಲಿ ಕಾಂಗ್ರೆಸ್ ಮತ್ತು ಚೀನಾದ ಪಾರ್ಟಿಯೊಂದಿಗೆ ಒಪ್ಪಂದ ನಡೆದು ಅರ್ಧಗಂಟೆಯ ಗುಪ್ತ ಮಾತುಕತೆಯೂ ಜರುಗಿತಲ್ಲ, ಅದರ ವಿವರಗಳೇನೆಂದು ಬಾಯ್ಬಿಟ್ಟಿದ್ದೀರಾ? ಅದಾದ ನಂತರ ನಮ್ಮ ಮತ್ತು ಚೀನಿಯರ ವ್ಯಾಪಾರ ಸಂಬಂಧಗಳಲ್ಲಿ ವೃದ್ಧಿ ಕಂಡು ಚೀನಿಯರ ಲಾಭ ಹೆಚ್ಚಾಗಿದ್ದನ್ನು ಅಂಕಿ-ಅಂಶಗಳು ಸಾಬೀತುಪಡಿಸುತ್ತಿವೆಯಲ್ಲ, ಏಕೆ ಮುಚ್ಚಿಡುತ್ತೀರಿ?
ಚೀನಾ ಭಾರತದೊಳಕ್ಕೆ ನುಸುಳಿದೆ ಎಂದು ಪದೇ ಪದೇ ಆರೋಪಿಸುವ ರಾಹುಲ್ ಮೊನ್ನೆ ಲಡಾಕ್ನ ಹಳ್ಳಿಗಳು ಚೀನಿಯರ ತೆಕ್ಕೆಯಲ್ಲಿವೆ ಎಂದರೆ ಹೊರತು, ಯಾವ ಹಳ್ಳಿ ಎಂದು ಹೆಸರಿಸಲೇ ಇಲ್ಲವಲ್ಲ! ೧೯೬೫ರಲ್ಲಿ ನಾವು ಕಳೆದುಕೊಂಡ ಭೂಪ್ರದೇಶ, ಪಾಕಿಸ್ತಾನ ಚೀನಾಕ್ಕೆ ನಮ್ಮಿಂದ ಕಸಿದು ಕೊಡುಗೆಯಾಗಿ ಕೊಟ್ಟಿರುವ ಆಕ್ಸಾಯ್ಚಿನ್, ಇವೆಲ್ಲದರ ಹೊಣೆ ಹೊರುವುದು ಬಿಟ್ಟು ಚೀನಿಯರು ಒಳ ನುಸುಳಿದ್ದಾರೆಂಬ ಸುಳ್ಳು ಸುದ್ದಿಯನ್ನು ಪುರಾವೆಯಿಲ್ಲದೇ ಹಬ್ಬಿಸುತ್ತಿದ್ದೀರಲ್ಲ!
ಇನ್ನು ಅದಾನಿಯ ಕುರಿತಂತೆ ನೀವು ಆರೋಪಗಳು ಇಂದು, ನಿನ್ನೆಯದ್ದಲ್ಲ. ಮೋದಿಯನ್ನು ಭ್ರಷ್ಟರೆಂದು ಸಾಬೀತು ಮಾಡಲೆತ್ನಿಸಿ ಸೋತು ಸುಣ್ಣವಾಗಿ ಕೊನೆಗೆ ನೀವು ಆತುಕೊಂಡಿದ್ದು ಅದಾನಿಗೆ. ನಿಮ್ಮ ಒಂದಷ್ಟು ಕುಕರ್ಮಗಳನ್ನು ನೆನಪಿಸುತ್ತೇವೆ.
ಕಾಂಗ್ರೆಸ್ನ ಐಟಿ ಮುಖ್ಯಸ್ಥ ಸರಲ್ ಪಟೇಲ್ ಅದಾನಿ ಸೇಬುಗಳ ಬಗ್ಗೆ ಸುಳ್ಳು ಟ್ವೀಟ್ ಮಾಡಿ ಅದರ ಕುರಿತಂತೆ ಜನ ಪ್ರತಿಕ್ರಿಯಿಸಲಾರಂಭಿಸಿದಾಗ ಡಿಲಿಟ್ ಮಾಡಿ ಓಡಿ ಹೋಗಿದ್ದರು.
ಶ್ರೀಲಂಕಾದಲ್ಲಿ ಅದಾನಿ ಕಂಪೆನಿಗೆ ಗುತ್ತಿಗೆ ಸಿಗುವಲ್ಲಿ ಮೋದಿ ಒತ್ತಡ ಹಾಕಿದ್ದಾರೆ ಎಂದು ನೀವೆಲ್ಲ ಬೊಂಬಡ ಬಜಾಯಿಸಿದಿರಿ, ಸ್ವತಃ ಶ್ರೀಲಂಕಾದ ಅಧ್ಯಕ್ಷರು ಅದನ್ನು ನಿರಾಕರಿಸಬೇಕಾಗಿ ಬಂತು. ಆಮೇಲೆ ನಿಮ್ಮ ಸದ್ದೇ ಇಲ್ಲ. ದಯಮಾಡಿ ಒಂದೇ ಮಾತು ಹೇಳಿ, ಶ್ರೀಲಂಕಾದಲ್ಲಿ ಭಾರತದ ಕಂಪೆನಿಯೊಂದಕ್ಕೆ ಗುತ್ತಿಗೆ ಸಿಕ್ಕರೆ ನಿಮಗೇಕಿಷ್ಟು ಉರಿ?
ಮೋದಿಯ ಕಾಲದಲ್ಲಿ ಅದಾನಿಯ ಆಸ್ತಿ ಹೆಚ್ಚಾಯ್ತು ಎನ್ನುವ ನೀವು ೨೦೧೧ರಲ್ಲಿ ಅದಾನಿ ಭಾರತದ ಅತಿ ಹೆಚ್ಚು ಆಸ್ತಿ ಉತ್ಪಾದನೆ ಮಾಡಿದ ಕೀರ್ತಿಗೆ ಪಾತ್ರರಾಗಿದ್ದರು, ಅವರ ಆಸ್ತಿ ಮೌಲ್ಯ ದ್ವಿಗುಣಗೊಂಡು ೩೩,೦೦೦ ಕೋಟಿ ದಾಟಿತ್ತು ಎನ್ನುವುದನ್ನು ಮರೆತೇಬಿಟ್ಟಿರಾ? ಹೋಯ್! ಆಗ ಪ್ರಧಾನಮಂತ್ರಿಯಾಗಿದ್ದಿದ್ದು ಮನಮೋಹನ್ ಸಿಂಗರೇ, ಮೋದಿಯಲ್ಲ!
ಹಿಂಡನ್ಬರ್ಗ್ನ ವರದಿ ನಿಮಗೆ ಗಸಗಸೆಯ ಪಾಯಸದಂತೆ ಸಿಕ್ಕಿತು. ಆದರೆ ಸರ್ವೋಚ್ಚ ನ್ಯಾಯಾಲಯ ನಿವೃತ್ತ ನ್ಯಾಯಾಧೀಶ ಸಪ್ರೆಯವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ಅದಾನಿಗೆ ಕ್ಲೀನ್ಚಿಟ್ ನೀಡಿತು. ಆನಂತರ ನೀವು ತಲೆಮರೆಸಿಕೊಂಡಿರಿ. ಒಂದೇ ಒಂದು ಸಾಕ್ಷಿಯನ್ನು ಕೊಡಲಾಗದೇ ಅದಾನಿ-ಮೋದಿಯವರ ಮೇಲೆ ಸುಳ್ಳು ಹೇಳುತ್ತಿದ್ದೀರಿ ಮತ್ತು ಕಾರ್ಟೂನುಗಳನ್ನು ಆಗಾಗ ಟ್ವೀಟ್ ಮಾಡುತ್ತಿರುತ್ತೀರಿ. ಕಾರ್ಟೂನುಗಳನ್ನೇ ನಾಯಕರನ್ನಾಗಿ ಹೊಂದಿರುವವರಿಂದ ಮತ್ತೇನು ನಿರೀಕ್ಷಿಸಲು ಸಾಧ್ಯ?
ಇಷ್ಟಕ್ಕೇ ಮುಗಿಯಿತೆಂದುಕೊಂಡರೆ, ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಅದಾನಿಯ ೬೫ ಸಾವಿರ ಕೋಟಿ ರೂಪಾಯಿ ಹೂಡಿಕೆಗೆ ಅಪಾರವಾದ ಹರ್ಷ ವ್ಯಕ್ತಪಡಿಸಿತು. ಮಹಾರಾಷ್ಟ್ರ ವಿಕಾಸ್ ಅಗಾಡಿ ಅಧಿಕಾರದಲ್ಲಿದ್ದಾಗ ಅಲ್ಲಿನ ಬಂದರೊಂದಕ್ಕೆ ಹತ್ತುಸಾವಿರ ಕೋಟಿ ಅದಾನಿ ಹೂಡಿದ್ದನ್ನು ನೀವು ಚಪ್ಪರಿಸಿದ್ದೀರಿ. ಕೇರಳದ ನಿಮ್ಮದ್ದೇ ನೇತೃತ್ವದ ಯುಡಿಎಫ್ ಸರ್ಕಾರ ಅದಾನಿಯನ್ನು ಬಂದರು ಅಭಿವೃದ್ಧಿಗೆ ಕರೆದು ಹೂಡಿಕೆ ಮಾಡಿಸಿದಾಗ ಫೆವಿಕಾಲ್ ನುಂಗಿ ತೆಪ್ಪಗಿದ್ದಿರಿ. ಯುಪಿಎ ಹತ್ತು ಪ್ರೊಜೆಕ್ಟ್ಗಳಲ್ಲಿ ೨೧ ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡುವ ಅವಕಾಶವನ್ನು ಅದಾನಿಗೆ ನೀಡಿತ್ತಲ್ಲ, ಅದನ್ನು ಮರೆತೇಬಿಟ್ಟಿದ್ದೀರಾ ಹೇಗೆ?
ನೀವು ಅದಾನಿಯ ಕುರಿತಂತೆ ಕೇಳಿರುವ ಪ್ರಶ್ನೆಗೆ ಇಷ್ಟು ಉತ್ತರ ಸಾಕು. ವಿಸ್ತಾರವಾಗಿ ಮತ್ತೊಮ್ಮೆ ಬರೆಯುತ್ತೇವೆ.
ಜನರನ್ನು ಜ್ವಲಂತ ವಿಚಾರಗಳಿಂದ ಬೇರೆಡೆಗೆ ಮೋದಿ ಸೆಳೆಯುತ್ತಾರೆ ಎಂಬ ನಿಮ್ಮ ಆರೋಪ ನೀವೇ ಕನ್ನಡಿಯಲ್ಲಿ ನಿಮ್ಮ ಮುಖ ನೋಡಿಕೊಂಡರೂ ಸುಳ್ಳೆಂದು ಅರಿವಾಗುತ್ತದೆ. ಮಣಿಪುರದ ಗಲಾಟೆ ನಿಮಗೆ ಸಂಸತ್ ಅಧಿವೇಶನಕ್ಕಿಂತಲೂ ಮುಂಚೆ ದಕ್ಕಿತು. ಗಲ್ವಾನಿನಲ್ಲಿ ಚೀನಿಯರ ಗಲಾಟೆಯ ಸುದ್ದಿ ಹೀಗೇ ಸಂಸತ್ನ ಅಧಿವೇಶನಕ್ಕೆ ಮುಂಚೆ ಬಂದಿತು. ಕಳೆದಬಾರಿ ಸಂಸತ್ ಅಧಿವೇಶನಕ್ಕೆ ಮುನ್ನ ಚೀನಿಯರು ಭಾರತೀಯರೊಂದಿಗೆ ಕಾದಾಡುವ ವಿಡಿಯೊ ಬಿಡುಗಡೆ ಮಾಡಿದ್ದರು. ಅದು ಹೇಗೆ ಚೀನೀ ಬೆಂಬಲದ ಕೃತ್ಯಗಳು ಸಂಸತ್ ಅಧಿವೇಶನಗಳಿಗೂ ಮುನ್ನ ನಡೆಯುತ್ತವೆ ಎಂಬುದೇ ಅನೇಕರಿಗೆ ಅಚ್ಚರಿ.
ಇನ್ನು ಇಂತಹ ವಿಚಾರಗಳ ಕುರಿತಂತೆ ರಾಹುಲ್ ಮಾತನಾಡದಿದ್ದರೆ ಒಳ್ಳೆಯದ್ದು. ರಫೇಲ್ ಕುರಿತಂತೆ ಸಂಸತ್ತಿನಲ್ಲಿ ಮಾತನಾಡುತ್ತಾ ಫ್ರಾನ್ಸ್ ಅಧ್ಯಕ್ಷರೇ ಕರೆಮಾಡಿ ಗೌಪ್ಯ ಕಾಯ್ದೆ ಯಾವುದೂ ಇಲ್ಲ ಎಂದು ಹೇಳಿದ್ದಾರೆ ಎಂಬ ರಾಹುಲ್ನ ಮಾತಿಗೆ ‘ಫ್ರಾನ್ಸಿನ ಅಧ್ಯಕ್ಷರೇ’ ಪ್ರತಿಕ್ರಿಯೆ ಕೊಟ್ಟು, ರಾಹುಲ್ ಜೊತೆ ಮಾತನಾಡಲೇ ಇಲ್ಲ ಎಂದು ಹೇಳಬೇಕಾಗಿ ಬಂದಿತ್ತಲ್ಲ, ಜಾಗತಿಕ ಮಟ್ಟದಲ್ಲಿ ಎಂತಹ ಕಪಾಳಮೋಕ್ಷ ಗೊತ್ತೇನು? ಪ್ರತಿಪಕ್ಷಗಳ ಒಗ್ಗಟ್ಟಿಗೆ ಮೋದಿ ಎಂಬ ಒಂದು ಕಾರಣವಲ್ಲದೇ ಮತ್ತೇನೂ ಇಲ್ಲ. ತಮ್ಮ ಸಾಮರ್ಥ್ಯದ ಹುಳುಕನ್ನು ಮುಚ್ಚಿಕೊಳ್ಳಲು ಸುಳ್ಳುಗಳಿಗೆ ಮೊರೆಹೋಗದೇ ನಿಮಗೆ ಬೇರೆ ಮಾರ್ಗವೇ ಇಲ್ಲ. ಒಂದು ದೇಶಕ್ಕೆ ಒಂದೇ ಚುನಾವಣೆ ಎಂಬುದು ಅನವಶ್ಯಕ ಚರ್ಚೆ ಎಂದು ಹೇಳುವವ, ಸರ್ಕಾರದ ಬೊಕ್ಕಸವನ್ನು ಗಮನದಲ್ಲಿರಿಸಿಕೊಳ್ಳದೇ ಜನರಿಗೆ ಬೇಕಾಬಿಟ್ಟಿ ಆಶ್ವಾಸನೆ ಕೊಡಬಲ್ಲವ ಮಾತ್ರ ಆಗಿರುತ್ತಾನೆ. ರಾಷ್ಟ್ರನಾಯಕನೊಬ್ಬನಿಗೆ ದೇಶದ ಕಾಳಜಿಯೂ, ಜನಸಾಮಾನ್ಯರ ತೆರಿಗೆಯ ಹಣದ ಕಾಳಜಿಯೂ ಇದ್ದಾಗ ಈ ರೀತಿಯ ಆಲೋಚನೆ ಸಹಜ. ಇಷ್ಟಕ್ಕೂ ಸ್ವಾತಂತ್ರö್ಯ ಬಂದಾಗಿನಿಂದಲೂ ಒಂದು ರಾಷ್ಟ್ರ ಒಂದು ಚುನಾವಣೆಯೇ ಇದ್ದದ್ದು. ಕಾಂಗ್ರೆಸ್ಸು ಬೇಕಾಬಿಟ್ಟಿ ರಾಜ್ಯ ಸರ್ಕಾರಗಳನ್ನು ಬರಖಾಸ್ತು ಮಾಡುವ ಕಾರ್ಯ ಆರಂಭಿಸಿದ ನಂತರವೇ ಚುನಾವಣೆಗಳು ಈ ರೀತಿ ಅಂಕೆ ಕಳೆದುಕೊಂಡಿರುವುದು. ನಿಮ್ಮ ಬಳಿ ಇಂತಹ ಘನವಾದ ಚರ್ಚಿಸದಿರುವುದೊಳಿತು ಎಂದೇ ನಮಗನ್ನಿಸುತ್ತದೆ.
ಇನ್ನು, ಮೋದಿ ಇಸ್ರೋದ ವಿಜ್ಞಾನಿಗಳ ಸಾಧನೆಯನ್ನು ಪಕ್ಷದ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದಿದ್ದೀರಿ. ಇಸ್ರೋದ ಮಾಜಿ ಅಧ್ಯಕ್ಷ ಮಾಧವ್ ನಾಯರ್, ಯುಪಿಎ ಅಧಿಕಾರದಲ್ಲಿದ್ದಾಗ ಇಸ್ರೋವನ್ನು ಕಡೆಗಣಿಸಿತ್ತೆಂದೂ ಮೋದಿ ಅದಕ್ಕೆ ಪೂರ್ಣ ಸ್ವಾತಂತ್ರö್ಯವನ್ನು ಕೊಟ್ಟು ಬೆಳೆಸಿದರೆಂದು ಟೈಮ್ಸ್ನೌಗೆ ಕೊಟ್ಟ ಸಂದರ್ಶನದಲ್ಲಿ ಸ್ಪಷ್ಟವಾಗಿ ನುಡಿದಿದ್ದಾರೆ. ಅರ್ನಬ್ ಗೋಸ್ವಾಮಿಯೊಂದಿಗೆ ಮಾತನಾಡುತ್ತಾ, ಚಂದ್ರಯಾನ ಎಂದೋ ಮುಗಿಯಬೇಕಿದ್ದ ಯೋಜನೆಯಾಗಿತ್ತು. ಆದರೆ ಯುಪಿಎ-೨ರಲ್ಲಿ ಆ ಇಡೀ ಯೋಜನೆಯನ್ನು ಮೂಲೆಗುಂಪಾಗಿಸಿದ್ದರಿಂದ ಭಾರತದ ಈ ವಿಕ್ರಮ ತಡವಾಯ್ತು ಎಂದಿದ್ದರು. ಇಷ್ಟಕ್ಕೂ ಮೊದಲ ಚಂದ್ರಯಾನಕ್ಕೆ ಹಸಿರು ನಕಾಶೆ ತೋರಿದ್ದು ಅಟಲ್ ಬಿಹಾರಿ ವಾಜಪೇಯಿಯವರಲ್ಲದೇ ಕಾಂಗ್ರೆಸ್ಸಿನ ಸರ್ಕಾರವಲ್ಲ. ಇತ್ತೀಚೆಗೆ ಇಸ್ರೋದ ಮಾಜಿ ವಿಜ್ಞಾನಿ ಡಾ.ವೈ.ಎಸ್ ರಾಜನ್ ಆದಿತ್ಯ ಯೋಜನೆ ೨೦೦೮ರಲ್ಲೇ ರೂಪುಗೊಂಡಿತ್ತು ಎಂದಿದ್ದಾರೆ. ಅದರರ್ಥ ನಿಮ್ಮ ಸರ್ಕಾರಗಳಿಂದ ಅದಕ್ಕೆ ಯಾವ ಬೆಂಬಲವೂ ಸಿಗದೇ ಮೂಲೆಗುಂಪಾಯ್ತು ಎಂತಲೇ ಅಲ್ಲವೇನು? ಇಸ್ರೊದ ಈ ವಿಕ್ರಮಕ್ಕೆ ಮೋದಿಯೇ ಬರಬೇಕಾಯ್ತು ಎನ್ನುವುದು ಇಡೀ ದೇಶಕ್ಕೆ ಗೊತ್ತಿದೆ.
ಇಷ್ಟಾದರೂ ಈ ನಡುವೆ ಆತುರಾತುರವಾಗಿ ಮೋದಿ ಬರುವ ಮುನ್ನ ವಿಜ್ಞಾನಿಗಳನ್ನು ಅಭಿನಂದಿಸಬೇಕೆಂದು ನೀವು ಓಡಿದ್ದೇಕೆ? ನಿಮಗೂ ಮುನ್ನ ಧಾವಂತಕ್ಕೆ ಬಿದ್ದು ಉಪಮುಖ್ಯಮಂತ್ರಿಗಳೇ ಓಡಿಬಿಟ್ಟರಲ್ಲ! ಅಷ್ಟೇ ಅಲ್ಲ, ಪತ್ರಿಕೆಯಲ್ಲಿ ಅಭಿನಂದನೆ ಸಲ್ಲಿಸುವಾಗ ಅಧಿಕೃತವಾಗಿ ವೈಜ್ಞಾನಿಕ ಸಂಸ್ಥೆಗಳ ಮುಖ್ಯಸ್ಥವಾಗಿರುವ ಪ್ರಧಾನಮಂತ್ರಿಯ ಚಿತ್ರವನ್ನು ಬಿಟ್ಟು ಜಾಹಿರಾತು ಪ್ರಕಟಿಸಿದಿರಲ್ಲ, ನಿಮ್ಮ ಆತ್ಮಸಾಕ್ಷಿ ಚುಚ್ಚಲಿಲ್ಲವೇನು? ಸಣ್ಣತನಕ್ಕೆ ಇಳಿದಿದ್ದು ಯಾರು? ಸಾಧ್ಯವಾದರೆ ಕನ್ನಡಿಗರಿಗೆ ಉತ್ತರಿಸಿ. ಹ್ಞಾಂ! ಮನ್ ಕಿ ಬಾತ್ ಬಿಟ್ಟು ಕಾಮ್ ಕಿ ಬಾತ್ ಹೇಳಿ ಎಂದಿದ್ದೀರಿ. ನಾನು ಪಟ್ಟಿಯನ್ನೇನು ನಿಮ್ಮ ಮುಂದಿಡುವುದಿಲ್ಲ. ಪಿ.ಚಿದಂಬರಂ ಮೊಬೈಲ್ ಬ್ಯಾಂಕಿಂಗ್ ಅನ್ನು ಸಂಸತ್ತಿನಲ್ಲಿ ಕಂಠಮಟ್ಟ ಆಡಿಕೊಂಡಿದ್ದರು. ಕಳೆದ ಆಗಸ್ಟ್ ತಿಂಗಳೊಂದರಲ್ಲೇ ಸುಮಾರು ೧೫ ಲಕ್ಷಕೋಟಿ ಮೌಲ್ಯದ ಒಂದು ಸಾವಿರ ಕೋಟಿ ಡಿಜಿಟಲ್ ವ್ಯವಹಾರಗಳು ನಡೆದಿವೆ. ಮೋದಿಯ ನಿರಂತರ ಪ್ರಯಾಸದ ಕಾರಣಕ್ಕೆ ಇಂದು ಈ ಗೌರವ ನಮ್ಮ ಪಾಲಿಗೆ. ತರಕಾರಿ ಮಾರುವವನಿಂದ ಹಿಡಿದು, ಆಟೋ ಡ್ರೆöÊವರ್ನವರೆಗೆ ಪ್ರತಿಯೊಬ್ಬರೂ ಕ್ಯುಆರ್ ಕೋಡ್ ಮೂಲಕ ಹಣ ಪಡೆಯುತ್ತಾರಲ್ಲ, ಇದು ಮೋದಿಯ ಸಾಧನೆಯೇ. ನಿಮಗೆ ಡಿಜಿಟಲ್ ತಂತ್ರಜ್ಞಾನದ ಕುರಿತಂತೆ ಜ್ಞಾನ ಸ್ವಲ್ಪ ಕಡಿಮೆ ಎಂದು ನೀವೇ ಹೇಳಿಕೊಂಡಿರುವುದರಿಂದ ಈ ಬಗ್ಗೆ ನಾವು ಹೆಚ್ಚು ವಿಸ್ತಾರವಾಗಿ ಚರ್ಚಿಸಲಾರೆವು. ನಮ್ಮದ್ದು ಒಂದೇ ಪ್ರಶ್ನೆ ತೆರಿಗೆಯ ಹಣವನ್ನು ಮನಸೋ ಇಚ್ಛೆ ನೀತಿ-ನಿಯಮಗಳಿಲ್ಲದೇ ಹಂಚುತ್ತಿರುವ ತಾವು ಕರ್ನಾಟಕವನ್ನು ವಿಕಾಸದ ಪಥಕ್ಕೆ ಎಂದು ಮರಳಿ ತರುವಿರಿ? ದೇಶದ ಕಥೆ ಆಮೇಲೆ ಮಾತಾಡೋಣ. ಮೊದಲು ಉಪಮುಖ್ಯಮಂತ್ರಿಗಳೇ ಅಭಿವೃದ್ಧಿಗೆ ಹಣವಿಲ್ಲ ಎಂದಿದ್ದಾರಲ್ಲ, ಅದಕ್ಕೊಂದಷ್ಟು ಉತ್ತರ ಕೊಟ್ಟರೆ ನಮ್ಮೆಲ್ಲರ ಹೊಟ್ಟೆ ತಂಪಾದೀತು. ಇನ್ನೂ ೧೭೨೫ ದಿನ ಬಾಕಿ ಇದೆ, ನೀವೊಬ್ಬರೇ ಅಲ್ಲಿಯವರೆಗೂ ಇರುತ್ತೀರಾ ಎನ್ನುವುದಾದರೆ, ಕರ್ನಾಟಕವನ್ನು ಚೆನ್ನಾಗಿ ಸಂಭಾಳಿಸಿ. ಮುಂದಿನ ಪೀಳಿಗೆಗೆ ನೀವೂ ಕರ್ನಾಟಕದ ಮೋದಿ ಎನಿಸಿಕೊಳ್ಳಲು ಈಗಲೂ ಅವಕಾಶವಿದೆ. ಪ್ರಯತ್ನ ಪಡಿ.
Fact check ಮಾಡಬೇಕೆಂಬ ನಿಮ್ಮ ಬಯಕೆಗೆ ಧಕ್ಕೆ ಬರದಿರಲೆಂದು ಎಲ್ಲಾ ಪುರಾವೆಗಳ ಈ ನ್ಯೂಸ್ ರಿಪೋರ್ಟ್ಗಳನ್ನೂ ಹಂಚಿಕೊಳ್ಳುತ್ತಿರುವೆವು, ಒಮ್ಮೆ ಕಣ್ಣಾಡಿಸಿ…